ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ - ಸ್ಥಳೀಯ ಸರ್ಕಾರ - ಗ್ರಾಮ ಪಂಚಾಯತ್ ಆಡಳಿತ ಯಾರ ಕೈಗೆ?
ಕರ್ನಾಟಕದಲ್ಲಿ ಸ್ಥಳೀಯ ಸರ್ಕಾರ - ಗ್ರಾಮ ಪಂಚಾಯತ್ ಗೆ ಸಕಾಲದಲ್ಲಿ ಚುನಾವಣೆ ನಡೆಸುವುದು ಅಥವಾ ಚುನಾವಣೆ ಮುಂದೂಡಿದ್ದಲ್ಲಿ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿಯ ಬದಲಿಗೆ ಈಗ ಇರುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸ್ಥಳೀಯ ಸರ್ಕಾರವನ್ನೇ ಸ್ಥಳೀಯಾಡಳಿತ ಸಮಿತಿಯಾಗಿ ಚುನಾವಣೆ ನಡೆಯುವವರೆಗೆ ಮುಂದುವರೆಸುವ ಬಗ್ಗೆ ಹಕ್ಕೊತ್ತಾಯ ಮಾಡಿ ರಾಜ್ಯದ ವಿವಿಧ ಗ್ರಾಮ ಪಂಚಾಯಿತಿಗಳು ಸರ್ಕಾರಕ್ಕೆ ಕಳುಹಿಸಿದ ನಿರ್ಣಯಗಳ ಕುರಿತಾಗಿ..,
ಗ್ರಾಮ ಪಂಚಾಯತ್ ಪ್ರತಿನಿಧಿಗಳಲ್ಲಿ.. ಗೌರವಾನ್ವಿತ ಗ್ರಾಮ ಪಂಚಾಯತ್ ಪ್ರತಿನಿಧಿಗಳೇ,
ತಮಗೆಲ್ಲರಿಗೂ ತಿಳಿದಿರುವಂತೆ, ಸಹಜ ಪರಿಸ್ಥಿತಿ ಇದ್ದರೆ, ಇಲ್ಲಿಯವರೆಗೆ ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ಘೋಷಣೆಯಾಗಬೇಕಿತ್ತು ಅಥವಾ ಅದರ ಆರಂಭದ ಎಲ್ಲಾ ತಯಾರಿಗಳು ನಡೆಯಬೇಕಿತ್ತು ಆದರೆ ಕೋವಿಡ್ - 19ರ ಪರಿಣಾಮದಿಂದಾಗಿ ಈ ಸನ್ನಿವೇಶದಲ್ಲಿ ಚುನಾವಣೆ ನಡೆಸುವುದು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಹಾಗಾಗಿ ಸರ್ಕಾರ ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ನೀವೆಲ್ಲರೂ ಆಲೋಚಿಸಬೇಕಾಗಿದೆ. ಸರ್ಕಾರದ ಮುಂದಿರುವ ದಾರಿಗಳು: ಆಡಳಿತಾಧಿಕಾರಿಗಳು ಅಥವಾ ಆಡಳಿತ ಸಮಿತಿಯ ನೇಮಕ ಇನ್ನೊಂದು ಅವಕಾಶ: ಈಗ ಇರುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸ್ಥಳೀಯ ಸರ್ಕಾರವನ್ನೇ ಮುಂದಿನ ಚುನಾವಣೆ ನಡೆಯುವವರೆಗೆ ಮುಂದುವರೆಸುವುದು. ಕೋವಿಡ್ 19ಕ್ಕೆ ಸಂಬಂಧಿಸಿದ ತುರ್ತು ಪರಿಸ್ಥಿತಿಯನ್ನೂ ಒಳಗೊಂಡಂತೆ ಸಾಮಾನ್ಯ ಹಾಗೂ ವಿವಿಧ ತುರ್ತು ಸಂದರ್ಭಗಳನ್ನು ಸ್ಥಳೀಯ ಸರ್ಕಾರವಾಗಿ ಗ್ರಾಮ ಪಂಚಾಯತ್ ಸಮರ್ಥವಾಗಿ ನಿಭಾಯಿಸಿದೆ ಮತ್ತು ಅದನ್ನು ಈಗಲೂ ಮುಂದುವರೆಸುತ್ತಿದೆ. ಇದರಲ್ಲಿ ಚುನಾಯಿತ ಸದಸ್ಯರಾದ ನಿಮ್ಮೆಲ್ಲರ ಪಾತ್ರ ಪ್ರಮುಖವಾದುದೆಂದು ಬೇರೆ ಹೇಳಬೇಕಾಗಿಲ್ಲ. ಈ ರೀತಿಯ ಕಾರ್ಯಗಳನ್ನು ಚುನಾಯಿತ ಸದಸ್ಯರು ನಿಭಾಯಿಸಿದಷ್ಟು- ಜನರಿಗೆ ಯಾವುದೇ ಉತ್ತರದಾಯಿತ್ವವನ್ನು ತೋರಿಸಬೇಕಾದ ಅಗತ್ಯವಿಲ್ಲದಿರುವ ಯಾವುದೇ ಆಡಳಿತಾಧಿಕಾರಿಗಳು ಅಥವಾ ಆಡಳಿತ ಸಮಿತಿಯ ಸದಸ್ಯರು ಮಾಡುವುದು ಸಾಧ್ಯವಿಲ್ಲ ಎಂದೇ ಹೇಳಬೇಕು. ಹಾಗಾಗಿ ಈಗ ಇರುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸ್ಥಳೀಯ ಸರ್ಕಾರವನ್ನೇ ಮುಂದಿನ ಚುನಾವಣೆ ನಡೆಯುವವರೆಗೆ ಮುಂದುವರೆಸುವಂತೆ ನಿಮ್ಮ ನಿಮ್ಮ ಗ್ರಾಮ ಪಂಚಾಯತ್ ಸಭೆಯಲ್ಲಿ ನಿರ್ಣಯಿಸಿ ಅದನ್ನು ಅದನ್ನು ಸರ್ಕಾರಕ್ಕೆ ಕಳುಹಿಸಿ ಒತ್ತಾಯಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಿರ್ಣಯವನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ತಕ್ಷಣ ತಮ್ಮ ತಮ್ಮ ಗ್ರಾಮ ಪಂಚಾಯತ್ ಗಳಲ್ಲಿ ನಿರ್ಣಯ ಮಾಡಿ ನಿರ್ಣಯದ ಪ್ರತಿಯನ್ನು ಸರ್ಕಾರಕ್ಕೆ ಹಾಗೂ ಒಂದು ಪ್ರತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿರ್ಣಯಗಳನ್ನು ಇಲ್ಲಿಗೆ ಕಳುಹಿಸಿ: [email protected] |
ನಿರ್ಣಯದ ಪ್ರತಿ |