ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತಾದ ಸಂದೇಶಗಳು: -
ಭಾರತದ ಸಂವಿಧಾನದ ಪೀಠಿಕೆ ಹೇಳುವುದೇನೆಂದರೆ:
ಭಾರತ ವಾಸಿಗಳಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಲೋಕತಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳಾದ:
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;
ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ;
ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ;
ಇವುಗಳನ್ನು ದೊರಕಿಸಿ,
ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವವನ್ನು
ಪ್ರೋತ್ನಾಹಿಸಲು ನಿರ್ಧರಿಸಿ;
ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ಈ 1949ರ ನವೆಂಬರ್ ಮಾಹೆಯ 26ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗಿ ವಿಧಿಸಿಕೊಳ್ಳುತ್ತೇವೆ.
ಭಾರತದ ಪಂಚಾಯತ್ ರಾಜ್ ವ್ಯವಸ್ಥೆಗೆ ಭವ್ಯ ಇತಿಹಾಸವಿದೆ. ಪ್ರಜಾಸತ್ತೆಯ ಮೂಲ ಆಶಯವೇ 'ಪ್ರಜೆಗಳೇ ಪ್ರಭುಗಳು'. ಸಂವಿಧಾನದ 73ನೇ ತಿದ್ದುಪಡಿಯು ಭಾರತದಲ್ಲಿ ಏಕರೂಪದ ಪಂಚಾಯತ್ ರಾಜ್ ವ್ಯವಸ್ಥೆಗೆ ಅಸ್ಥಿಭಾರ ಹಾಕಿತು. ಈ ರೀತಿಯಲ್ಲಿ ಉತ್ತಮ ಪಂಚಾಯತ್ ರಾಜ್ ವ್ಯವಸ್ಥೆಯನ್ನು ರೂಪಿಸುವಲ್ಲಿ, ಸುದೃಢಗೊಳಿಸುವಲ್ಲಿ ಅನೇಕರು ಶ್ರಮವಹಿಸಿದ್ದಾರೆ, ತಮ್ಮ ಉತ್ತಮ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿದ್ದಾರೆ. ಅಂತಹ ಕೆಲವು ಚಿಂತಕರು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿದ ಆಲೋಚನೆಗಳು ಇಲ್ಲಿವೆ.