ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ನಡೆದು ಬಂದ ದಾರಿ
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಪಕ್ಷಿನೋಟ
(ಆಂದೋಲನದ ಮೈಲಿಗಲ್ಲುಗಳ ಸಂಪೂರ್ಣ ವಿವರಗಳಿಗಾಗಿ ಈ ಮೇಲಿನ ಲಿಂಕ್ ಕ್ಲಿಕ್ಕಿಸಿ)
2007ರಲ್ಲಿ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆಯ ತಿದ್ದುಪಡಿಯು ಕರ್ನಾಟಕದ ಎರಡೂ ಶಾಸನ ಸಭೆಗಳಲ್ಲಿ ಅಂಗೀಕಾರವಾದಾಗ 5000ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಸದಸ್ಯರು ತಮ್ಮದೇ ಸಂಪನ್ಮೂಲಗಳನ್ನು ಬಳಸಿ, ಉಕ್ಕಿ ಹರಿಯುವ ಉತ್ಸಾಹದಿಂದ ತಮ್ಮ ಹಕ್ಕು ಮತ್ತು ಹೊಣೆಗಾರಿಕೆಗಳನ್ನು ರಕ್ಷಿಸಿ ಎತ್ತಿ ಹಿಡಿಯಲು ಒಗ್ಗೂಡಿದರು. ಆ ಸಮಯದಲ್ಲಿ ಇವರೆಲ್ಲರ ಆಶಯದಂತೆ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ರೂಪುಗೊಂಡಿತು.
ಗ್ರಾಮ ಪಂಚಾಯತ್ ಸದಸ್ಯರ ಹಾಗೂ ಗ್ರಾಮ ಸಭಾ ಸದಸ್ಯರ ಸಂವಿಧಾನಾತ್ಮಕ ಹಕ್ಕುಗಳು ಹಾಗೂ ಅಧಿಕಾರಗಳನ್ನು ಎತ್ತಿ ಹಿಡಿಯುವಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸದಾ ಕಾರ್ಯನಿರ್ವಹಿಸುತ್ತಿದೆ. ಅಂದಿನಿಂದ ಅಂದಿನವರೆಗೂ ಆಂದೋಲನವು ತಾನು ನಡೆದು ಬಂದ ದಾರಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದೆ. ಆ ಹಾದಿಯಲ್ಲಿ ಅನೇಕ ಮರೆಯಲಾರದ ಹೆಜ್ಜೆ ಗುರುತುಗಳನ್ನು, ಮೈಲಿಗಲ್ಲುಗಳನ್ನು ಅಚ್ಚೊತ್ತಿದೆ.
ಆಂದೋಲನದ ಅತ್ಯಂತ ಪ್ರಮುಖ ಹೆಜ್ಜೆಗಳು:-
ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕದ ವಿರುದ್ಧ ಸಮಾವೇಶ (ಜುಲೈ 2007): 2007ರ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕ ರಾಜ್ಯದ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತುಗಳು ಕರ್ನಾಟಕ ಪಂಚಾಯತ್ ಕಾಯಿದೆ 1993ಕ್ಕೆ ತಿದ್ದುಪಡಿಯೊಂದನ್ನು ಅಂಗೀಕರಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತು. ಈ ತಿದ್ದುಪಡಿ ಏನೆಂದರೆ- "ರಾಜ್ಯ ಸರ್ಕಾರ ಅನುದಾನ ನೀಡುತ್ತಿರುವ ವಸತಿ ಹಾಗೂ ಇತರೇ ಯೋಜನೆಗಳಿಗೆ ಗ್ರಾಮ ಸಭೆಯು ನಿಗದಿತ ಅವಧಿಯೊಳಗೆ ಫಲಾನುಭವಿಗಳ ಆಯ್ಕೆ ಮಾಡದೇ ಇದ್ದಲ್ಲಿ, ಸರ್ಕಾರವು ಆಯಾ ಪ್ರದೇಶದ ಶಾಸಕರ ಅಧ್ಯಕ್ಷತೆಯಲ್ಲಿ ನೇಮಿಸುವ ಸಮಿತಿ ಅಥವಾ ಸರ್ಕಾರ ನಿಗದಿಪಡಿಸುವ ಅಧಿಕಾರಿ ಈ ಫಲಾನುಭವಿಗಳನ್ನು ಆಯ್ಕೆ ಮಾಡಬಹುದು." ಈ ತಿದ್ದುಪಡಿಯನ್ನು ಪ್ರತಿಭಟಿಸಿ, ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಯಿತು. ಈ ಸಮಾವೇಶವು ರಾಜ್ಯದಾದ್ಯಂತ ಗ್ರಾಮ ಸಭೆಯ ಗೊತ್ತುವಳಿ, ಸಹಿ ಆಂದೋಲನ, ಜಿಲ್ಲಾವಾರು ಪ್ರತಿಭಟನೆ, ಸರಣಿ ಧರಣಿಗಳನ್ನು ಒಳಗೊಂಡಿತ್ತು. ಈ ಸಮಾವೇಶದಲ್ಲಿ ರಾಜ್ಯದಾದ್ಯಂತ ಅಂದಾಜು 5000ಕ್ಕೂ ಮಿಕ್ಕಿ ಗ್ರಾಮ ಪಂಚಾಯತ್ ಹಾಗೂ ಗ್ರಾಮ ಸಭಾ ಸದಸ್ಯರು ಪಾಲ್ಗೊಂಡಿದ್ದರು. ರಾಜ್ಯಪಾರು ಈ ವಿಧೇಯಕಕ್ಕೆ ಅಂಗೀಕಾರ ಹಾಕದೇ ಪುನರ್ ಪರಿಶೀಲನೆಗೆ ಹಿಂತಿರುಗಿಸಿದರು.
- ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕದ ವಿರುದ್ಧ ಪ್ರತಿಭಟನೆ (ನವೆಂಬರ್ 2008): ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಪುನಃ ಮಂಡಿಸುವ ಪ್ರಯತ್ನ ನಡೆಯಿತು. ಪಟ್ಟಭದ್ರ ಹಿತಾಸಕ್ತಿಗಳ ಅನುಕೂಲಕ್ಕಾಗಿ ವಿಕೇಂದ್ರೀಕೃತ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೂಲವಾದ ಗ್ರಾಮ ಸಭೆಗಳ ಹಾಗೂ ಗ್ರಾಮ ಪಂಚಾಯತ್-ಗಳ ದುರ್ಬಲಗೊಳಿಸುವ ಈ ವಿಧೇಯಕವನ್ನು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಸದಸ್ಯರು ಒಕ್ಕೊರಲಿನಿಂದ ಪ್ರತಿಭಟಿಸಿದರು. ಸರ್ಕಾರವು ಈ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತರುವ ಆಲೋಚನೆಯನ್ನು ಕೈಬಿಟ್ಟಿತು.
- ಮೂರನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಅನುಷ್ಠಾನಕ್ಕೆ ಮನವಿ (ಜನವರಿ 2009): ಮೂರನೇ ಹಣಕಾಸು ಆಯೋಗವು ತನ್ನ ವರದಿಯಲ್ಲಿ ಗ್ರಾಮ ಪಂಚಾಯತ್-ಗಳನ್ನು ಬಲಪಡಿಸುವ ಹಲವಾರು ಶಿಫಾರಸ್ಸುಗಳನ್ನು ಮಾಡಿ, ಆ ವರದಿಯನ್ನು ಸರ್ಕಾರದ ಮುಂದೆ ಮಂಡಿಸಿತು. ವಿಕೇಂದ್ರೀಕರನದ ತಳಹದಿಯಾದ ಗ್ರಾಮ ಸಭೆ ಹಾಗೂ ಗ್ರಾಮ ಪಂಚಾಯತ್-ಗಳ ಸಬಲೀಕರಣಕ್ಕಾಗಿ ಈ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಪೂರ್ವಕ ಮನವಿಯನ್ನು ಸಲ್ಲಿಸಲಾಯಿತು.
- ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ 2007ನ್ನು ಸಂಪೂರ್ಣವಾಗಿ ಕೈಬಿಡಬೇಕೆಂದು ಒತ್ತಾಯಿಸಿ ಪ್ರತಿಭಟನೆ (ಜುಲೈ 2009): ಜುಲೈ 2009ರಲ್ಲಿ 2007ರ ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವೂ ಸೇರಿದಂತೆ 11 ವಿಷಯಗಳಲ್ಲಿ ಕಾನೂನು ತಿದ್ದುಪಡಿ ತರುವ ವಿಷಯಗಳ ಪಟ್ಟಿಯನ್ನು ಸರ್ಕಾರವು ತಯಾರಿಸಿತು. ಇದನ್ನು ವಿರೋಧಿಸಿ ಜುಲೈ 24,2009ರಂದು ಬೆಂಗಳೂರಿನ ಬನ್ನಪ್ಪ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪಂಚಾಯತ್ ರಾಜ್ ಹಾಗೂ ವಿಕೇಂದ್ರೀಕರಣ ವ್ಯವಸ್ಥೆಯನ್ನು ಗೌರವಿಸುವ ಅನೇಕ ರಾಜಕೀಯ ನಾಯಕರು ಆಂದೋಲನದ ಈ ನಡೆಯನ್ನು ಬೆಂಬಲಿಸಿದರು. ಅಲ್ಲದೇ ಅಂದಿನ ರಾಜ್ಯಪಾಲರು ವಿಕೇಂದ್ರೀಕರಣದ ಆಶಯಕ್ಕೆ ಒತ್ತು ನೀಡುವ ಸಂವಿಧಾನಾತ್ಮಕ ಅಧಿಕಾರಗಳನ್ನು ದೊರಕಿಸಿಕೊಡಲು ತಾನು ಸದಾ ಬದ್ಧ ಎಂದರು. ಈ ಎಲ್ಲಾ ಕಾರಣಗಳಿಂದಾಗಿ ಸರ್ಕಾರವು "ಆಶ್ರಯ ಯೋಜನೆಯನ್ನು ಶಾಸಕರ ನೇತೃತ್ವದಲ್ಲಿರುವ ಯಾವುದೇ ಸಮಿತಿಗೆ ನೀಡುವುದಿಲ್ಲ; ಇದು ಗ್ರಾಮ ಸಭೆಯ ಅಧಿಕಾರ" ಎಂದು ಹೇಳಿಕೆ ನೀಡುವ ಮೂಲಕ ಈ ತಿದ್ದುಪಡಿ ಆಲೋಚನೆಯನ್ನು ಕೈಬಿಟ್ಟಿತು.
- "ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ" - ಗೌರವಾನ್ವಿತ ಮತದಾರರ ಸ್ವಾಭಿಮಾನಿ ಹೋರಾಟ (ಏಪ್ರಿಲ್ - ಮೇ 2010):ಚುನಾವಣಾ ಸಮಯದಲ್ಲಿ ಮತದಾರರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತೋರಿಸಬಹುದಾದ ಯಾವುದೇ ಆಮಿಷಗಳಿಗೆ ಒಳಪಟ್ಟು ತಮ್ಮನ್ನು ಮತ್ತು ತಮ್ಮ ಮತಗಳನ್ನು ಮಾರಿಕೊಳ್ಳಬಾರದು ಎಂದು ಜಾಗೃತಿ ಮೂಡಿಸಲು ಮೊಟ್ಟ ಮೊದಲ ಬಾರಿಗೆ ಗ್ರಾಮ ಪಂಚಾಯತ್ ಚುನಾವಣೆ 2010ರಲ್ಲಿ ರಾಜ್ಯದಾದ್ಯಂತ "ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ" ಅಭಿಯಾನವನ್ನು ಪ್ರಾರಂಭಿಸಲಾಯಿತು. ಈ ಅಭಿಯಾನಕ್ಕೆ ರಾಜ್ಯದಾದ್ಯಂತ ಅಭೂತಪೂರ್ವ ಪ್ರೋತ್ಸಾಹ ದೊರಕಿತು. ಹಣದ ಆಮಿಷ ಮತ್ತು ಭ್ರಷ್ಟಾಚಾರವನ್ನು ಹೊಡೆದೋಡಿಸುವ ದಿಕ್ಕಿನಲ್ಲಿ ಆಂದೋಲನ ಹಾಕಿರುವ ದಿಟ್ಟ ಹೆಜ್ಜೆ ಇದೆಂದು ಗುರುತಿಸಲಾಯಿತು. ಆಂದೋಲನವನ್ನು ಬೆಂಬಲಿಸುವ ಅನೇಕರು, ಆಂದೋಲನದ ತತ್ವದಂತೆ ಮತದಾರರಿಗೆ ಯಾವುದೇ ಆಸೆ-ಆಮಿಷ ತೋರಿಸದೇ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು.
- ಹಣಕಾಸಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಪಂಚಾಯತ್ ಅಧ್ಯಕ್ಷರ ಅಧಿಕಾರ ಹಿಂಪಡೆದು ಸರ್ಕಾರ ಸೂಚಿಸುವ ಅಧಿಕಾರಿ ಅಥವಾ ಪ್ರಾಧಿಕಾರಕ್ಕೆ ಆ ಅಧಿಕಾರ ನೀಡಬೇಕೆಂಬ ಸರ್ಕಾರಿ ಆದೇಶದ ವಿರುದ್ಧ ಹೋರಾಟ (ಮೇ 2010):ಗ್ರಾಮ ಪಂಚಾಯತ್-ಗೆ ಸಂಬಂಧಿಸಿದ ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ಪಂಚಾಯತ್ ಅಧ್ಯಕ್ಷರ ಅಧಿಕಾರ ಹಿಂಪಡೆದು ಸರ್ಕಾರ ಸೂಚಿಸುವ ಅಧಿಕಾರಿ ಅಥವಾ ಪ್ರಾಧಿಕಾರಕ್ಕೆ ಆ ಅಧಿಕಾರ ನೀಡಬೇಕೆಂದು ಸರ್ಕಾರವು ಆದೇಶ ಹೊರಡಿಸಿತು. ಸಂವಿಧಾನಕ್ಕೆ ವಿರುದ್ಧವಾಗಿರುವ ಈ ಸರ್ಕಾರಿ ಆದೇಶವನ್ನು ವಿರೋಧಿಸಿ ರಾಜ್ಯದಾದ್ಯಂತ ಹಲವಾರು ಜಿಲ್ಲೆಗಳಲ್ಲಿ ಪತ್ರಿಕಾ ಗೋಷ್ಠಿ, ಪತ್ರಿಕಾ ಹೇಳಿಕೆಗಳು, ಮುಖ್ಮಮಂತ್ರಿಗಳಿಗೆ, ರಾಜ್ಯಪಾಲರಿಗೆ ಪತ್ರ, ಗ್ರಾಮ ಪಂಚಾಯತ್ ನಿರ್ಣಯಗಳ ಮೂಲಕ ಹೋರಾಟ ನಡೆಸಲಾಯಿತು. ಈ ಹೋರಾಟಕ್ಕೆ ಸ್ಪಂದಿಸಿ ಗ್ರಾಮ ಪಂಚಾಯತ್-ಗಳ ಹಣಕಾಸಿನ ವ್ಯವಹಾರಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಂಟಿಯಾಗಿ ನಿರ್ವಹಿಸತಕ್ಕದ್ದು ಎಂದು ಆದೇಶ ಹೊರಡಿಸಿತು.
- ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿರುವ ಅಪೌಷ್ಟಿಕ ಆಹಾರದ ವಿರುದ್ಧ ಆಂದೋಲನ (ಜನವರಿ-ಸಪ್ಟೆಂಬರ್ 2011):ರಾಜ್ಯದ ಅಂಗನವಾಡಿ ಮಕ್ಕಳಿಗೆ ಪೂರೈಕೆಯಾಗುತ್ತಿರುವ ಆಹಾರವು ಕಳಪೆ ಗುಣಮಟ್ಟದ್ದು, ಅಲ್ಲದೇ ಪೂರೈಕಾ ವಿಧಾನವೂ ಸಹ ಸರ್ವೋಚ್ಛ ನ್ಯಾಯಾಲಯದ ಆದೇಶದ ವಿರುದ್ಧವಾಗಿರುವುದನ್ನು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಗಮನಿಸಿತು. ಗ್ರಾಮ ಪಂಚಾಯತ್-ಗಳ ಜವಾಬ್ದಾರಿಯಾಗಿರುವ ಅಂಗನವಾಡಿಗಳನ್ನು ಪಂಚಾಯತ್-ಗಳಿಗೆ ಹಸ್ತಾಂತರಿಸದೇ ಸಂವಿಧಾನದ 73ನೇ ತಿದ್ದುಪಡಿಯ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆಯ ಉಲ್ಲಂಘನೆ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದ ಉಲ್ಲಂಘನೆಯನ್ನು ವಿರೋಧಿಸಿ, ರಾಜ್ಯದಾದ್ಯಂತ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ, ಸ್ಥಳೀಯವಾಗಿ ತಯಾರಿಸಿದ ಆಹಾರ ಪೂರೈಕೆಯಾಗಬೇಕು ಎಂದು ಆಂದೋಲನ ನಡೆಸಲಾಯಿತು.
- ಗ್ರಾಮ ಸ್ವರಾಜ್ ಸಮಾವೇಶ (9, 10 ಹಾಗೂ 11ನೇ ಡಿಸೆಂಬರ್ 2011): ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮ ಸಭಾ ಸದಸ್ಯರು ಒಂದೆಡೆ ಸೇರಿ, ಗ್ರಾಮ ಪಂಚಾಯತ್-ಗಳನ್ನು ಸುಲಲಿತವಾಗಿ ಮುನ್ನಡೆಸಲು ಎದುರಾಗುತ್ತಿರುವ ಅಡೆತಡೆಗಳನ್ನು ಕೂಲಂಕುಶವಾಗಿ ಚರ್ಚಿಸಿ, ಅವುಗಳಿಗೆ ಪರಿಹಾರೋಪಾಯಗಳನ್ನು ಗುರುತಿಸಿಕೊಳ್ಳಲು ಹಾಗೂ ಈ ಪರಿಹಾರಗಳನ್ನು ರಾಜ್ಯ ಸರ್ಕಾರದ ಮುಂದೆ ಮಂಡಿಸಿ, ಅವುಗಳ ಜಾರಿಯ ಬಗ್ಗೆ ಸರ್ಕಾರದ ಬದ್ಧತೆಯನ್ನು ಪಡೆದುಕೊಳ್ಳಲು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು 2011ನೇ ಡಿಸೆಂಬರ್ 9, 10 ಹಾಗೂ 11ರಂದು ರಾಜ್ಯ ಮಟ್ಟದ ಗ್ರಾಮ ಸ್ವರಾಜ್ ಸಮಾವೇಶ 2011ನ್ನು ಉಡುಪಿಯಲ್ಲಿ ನಡೆಸಿತು. ವಿಕೇಂದ್ರೀಕರಣದ ಆಶಯಕ್ಕೆ ಒತ್ತು ನೀಡಿರುವ, ಪ್ರೋತ್ಸಾಹಿಸಿರುವ ಅನೇಕರು ಈ ಸಮಾವೇಶದಲ್ಲಿ ಸಕ್ರೀಯವಾಗಿ ಪಾಲ್ಗೊಂಡರು. ಪಂಚಾಯತ್-ಗಳಿಗೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಗಂಭೀರ ಚರ್ಚೆಗಳು ನಡೆದು "ಉಡುಪಿ ನಿರ್ಣಯಗಳು 2011" ನ್ನು ತಯಾರಿಸಿ ಸರ್ಕಾರದ ಮುಂದೆ ಮಂಡಿಸಲಾಯಿತು.
- ಉಡುಪಿ ನಿರ್ಣಯಗಳು 2011ರ ಜಾರಿ ಹಾಗೂ ಮೂರನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಅನುಷ್ಠಾನಕ್ಕೆ ಒತ್ತಾಯಿಸಿ ಹಕ್ಕೊತ್ತಾಯ ಸಭೆ (ಜುಲೈ 18, 2012): ಈ ಹಿಂದೆ ಡಿಸೆಂಬರ್ 2011ರಲ್ಲಿ ಗ್ರಾಮ ಸ್ವಾರಾಜ್ ಸಮಾವೇಶ ನಡೆಸಿ ಗ್ರಾಮ ಪಂಚಾಯತ್ಗಳಿಗೆ ಸಂಬಂಧಿಸಿದಂತೆ ಉಡುಪಿ ನಿರ್ಣಯಗಳು 2011ನ್ನು ಸರ್ಕಾರದ ಮುಂದೆ ಮಂಡಿಸಿ, ಅವುಗಳ ಜಾರಿಗಾಗಿ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಆದರೆ 2012 ನೇ ಜುಲೈ ತಿಂಗಳ ಮಳೆಗಾಲದ ಅಧಿವೇಶನ ಬರುವವರೆಗೂ ಸರ್ಕಾರವು ಯಾವುದೇ ರೀತಿಯಲ್ಲಿ ಸ್ಪಂದಿಸದೇ ಇರುವ ಕಾರಣ ಜುಲೈ 18ನೇ 2012ರಂದು ಬೆಂಗಳೂರಿನ ಫ್ರೀಡಂ ಪಾರ್ಕ್-ನಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಉಡುಪಿ ನಿರ್ಣಯಗಳ ಹಾಗೂ ಮೂರನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಜಾರಿಗಾಗಿ ಒತ್ತಾಯಿಸಿ ಬೃಹತ್ ಹಕ್ಕೊತ್ತಾಯ ಸಭೆಯನ್ನು ಹಮ್ಮಿಕೊಂಡಿತು. ಈ ಸಭೆಯಲ್ಲಿ ರಾಜ್ಯದಾದ್ಯಂತ 29 ಜಿಲ್ಲೆಗಳ ಸುಮಾರು 8000 ಗ್ರಾಮ ಪಂಚಾಯತ್ ಹಾಗೂ ಗ್ರಾಮ ಸಭಾ ಸದಸ್ಯರು ಅತ್ಯಂತ ಉತ್ಸುಕತೆಯಿಂದ ಪಾಲ್ಗೊಂಡಿದ್ದರು. ಶೇಕಡಾ 85% ರಷ್ಟು ಮಹಿಳೆಯರು ಈ ಸಭೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿರುವುದು ಈ ಸಭೆಯ ವಿಶೇಷ. ವಿಕೇಂದ್ರೀಕೃತ ಪ್ರಜಾಪ್ರಭುತ್ವದ ಅವಹೇಳನೆ ಮಾಡುವಂತಹ ಯಾವುದೇ ಸರ್ಕಾರಿ ಆದೇಶವನ್ನು ಹಿಂಪಡೆಯಬೇಕು; ಅಲ್ಲದೇ ಉಡುಪಿ ನಿರ್ಣಯಗಳು 2011 ಹಾಗೂ ಮೂರನೇ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಯಿತು.
ವಿಕೇಂದ್ರೀಕೃತ ಪ್ರಜಾಪ್ರಭುತ್ವ ಗಟ್ಟಿಗೊಳಿಸುವಲ್ಲಿ ಆಂದೋಲನ ಅಂತರ್ಜಾಲ ತಾಣ ಬಿಡುಗಡೆ:
ವಿಕೇಂದ್ರೀಕೃತ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವತ್ತ, ಎಲ್ಲಾ ಗ್ರಾಮ ಪಂಚಾಯತ್-ಗಳೊಂದಿಗೆ ಹಾಗೂ ಗ್ರಾಮ ಸಭಾ ಸದಸ್ಯರೊಂದಿಗೆ ಮಾಹಿತಿ ಹಂಚಿಕೊಳ್ಳುವ ಪ್ರಯತ್ನವಾಗಿ ದಿನಾಂಕ 19-12-2012ರಂದು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ತನ್ನ ಈ ಅಂತರ್ಜಾಲ ತಾಣವನ್ನು ಬಿಡುಗಡೆಗೊಳಿಸಿತು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಎನ್.ಜಿ.ಓ. ಸಭಾಭವನದಲ್ಲಿ ಕರ್ನಾಟಕ ರಾಜ್ಯದ ಮೂರನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಅನುಷ್ಠಾನ ಪಡೆಯ ಕಾರ್ಯಾಧ್ಯಕ್ಷರಾದ ಶ್ರೀ ಎ.ಜಿ. ಕೊಡ್ಗಿಯವರು ಈ ಅಂತರ್ಜಾಲ ತಾಣವನ್ನು ಉದ್ಘಾಟಿಸಿ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಟ್ಟರು.
ಚೊಕ್ಕ ಚುನಾವಣಾ ಅಭಿಯಾನ:
ಕರ್ನಾಟಕ ರಾಜ್ಯದಲ್ಲಿ ಪ್ರಜಾತಂತ್ರ ನೆಲೆಯಲ್ಲಿ ಚೊಕ್ಕ ಚುನಾವಣೆಗಾಗಿ ರಾಜ್ಯವ್ಯಾಪಿ ಪ್ರಚಾರಾಂದೋಲನ ನಡೆಸುವ ಸಲುವಾಗಿ ಸಮಾನ ಮನಸ್ಕರು ಹಾಗೂ ಸಂಸ್ಥೆಗಳ ಸಹಭಾಗಿತ್ವದಲ್ಲಿ "ಚೊಕ್ಕ ಚುನಾವಣಾ ಅಭಿಯಾನ" ರೂಪುಗೊಂಡಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತವಾದ, ನ್ಯಾಯಯುತವಾದ, ಪ್ರಜಾಪ್ರಭುತ್ವದ ನಿಜ ಅರ್ಥದಲ್ಲಿ ಚುನಾವಣೆಗಳು ನಡೆಯುವುದು ಪ್ರಜೆಗಳ ಹಕ್ಕು ಎನ್ನುವ ವಿಚಾರಕ್ಕೆ "ಚೊಕ್ಕ ಚುನಾವಣಾ ಅಭಿಯಾನ" ಬದ್ಧವಾಗಿದೆ. ಕರ್ನಾಟಕ ರಾಜ್ಯದ 2013ರ ಚುನಾವಣೆಯಲ್ಲಿ "ಪರಿಣಾಮಕಾರಿ ಪರಿವರ್ತನೆ"ಯನ್ನು ಆಚರಣೆಗೆ ತರಲು, ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಈ ಅಭಿಯಾನ ತೊಡಗಿದೆ. ಈ ಅಭಿಯಾನದ ಮೂಲಕ ಚೊಕ್ಕ ಚುನಾವಣೆಯ ಅಗತ್ಯತೆಯ ಕುರಿತಾಗಿ ಜನರಿಗೆ ಮಾಹಿತಿ ನೀಡುವುದರೊಂದಿಗೆ ಚೊಕ್ಕ ಚುನಾವಣೆ ನಡೆಸುವಂತೆ ಅವರನ್ನು ಜಾಗೃತಗೊಳಿಸುತ್ತದೆ. ಅಲ್ಲದೇ ರಾಜಕೀಯ ಪಕ್ಷಗಳೊಂದಿಗೆ ಚೊಕ್ಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅಪರಾಧ ಹಿನ್ನೆಲೆ ಇಲ್ಲದ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸುವಂತೆ ಆಗ್ರಹ ಪೂರ್ವಕ ಮನವಿ ಕಳುಹಿಸುವುದರೊಂದಿಗೆ ಈ ಕುರಿತಾಗಿ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದೆ. ಅಲ್ಲದೇ ಚೊಕ್ಕ ಚುನಾವಣೆ ನಡೆಯುವಂತೆ ಪ್ರಭಾವ ಬೀರಲು ಚುನಾವಣಾ ಆಯೋಗ, ಮಾಧ್ಯಮಗಳು, ಕಾರ್ಮಿಕ ಸಂಘಟನೆಗಳು ಮತ್ತು ಜನಸಂಘಟನೆಗಳು, ಧಾರ್ಮಿಕ ಮುಖಂಡರು, ಸ್ಥಳೀಯ ಸಂಘಗಳು/ಸಮುದಾಯಾಧಾರಿತ ಗುಂಪುಗಳು ಇವರೊಂದಿಗೂ ಸಹ ಮಾತುಕತೆ ನಡೆಸುತ್ತಿದೆ.
ಜನರ ಕೈಗೆ ಅಧಿಕಾರ ಜನರದ್ದೇ ನಿರ್ಧಾರ:
ಪಂಚಾಯತ್ ವ್ಯವಸ್ಥೆಯ ಸ್ವರೂಪ, ಜನರ ಕೈಗೆ ಅಧಿಕಾರಕ್ಕಾಗಿ ಗ್ರಾಮ ಪಂಚಾಯತ್ ಗಳ ಸದೃಢತೆಯ ಅವಶ್ಯಕತೆ, ವಿಕೇಂದ್ರೀಕರಣಕ್ಕೆ ಇರುವ ನೈಜ ಅಡೆ-ತಡೆಗಳು - ಈ ವಿಚಾರಗಳ ಬಗ್ಗೆ ಚರ್ಚಿಸಲು ಆಂದೋಲನವು ಜುಲೈ 30, 2013ರಂದು ಬೆಂಗಳೂರಿನ ಶಾಸಕರ ಭವನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಸಮಾಲೋಚನಾ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಂದೋಲನದ ಪ್ರತಿನಿಧಿಗಳು, ವಿಶೇಷವಾಗಿ ಮಹಿಳೆಯರು ಸಕ್ರೀಯವಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ವಿಧಾನ ಸಭಾ ಹಾಗೂ ವಿಧಾನ ಪರಿಷತ್ ಸದಸ್ಯರೂ ಸಹ ಪಾಲ್ಗೊಂಡಿದ್ದರು.