2007ರ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕ ರಾಜ್ಯದ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತುಗಳು ಕರ್ನಾಟಕ ಪಂಚಾಯತ್ ರಾಜ್ ಕಾಯಿದೆಯ ಅಧಿನಿಯಮಕ್ಕೆ ತಿದ್ದುಪಡಿಯೊಂದನ್ನು ಅಂಗೀಕರಿಸಿತು. ಅದೇನೆಂದರೆ-"ರಾಜ್ಯ ಸರ್ಕಾರ ಅನುದಾನ ನೀಡುತ್ತಿರುವ ವಸತಿ ಹಾಗೂ ಇತರೇ ಯೋಜನೆಗಳಿಗೆ ಗ್ರಾಮ ಸಭೆಯು ನಿಗದಿತ ಅವಧಿಯೊಳಗೆ ಫಲಾನುಭವಿಗಳನ್ನು ಆಯ್ಕೆ ಮಾಡದೇ ಇದ್ದಲ್ಲಿ, ಸರ್ಕಾರ ಆಯಾ ಪ್ರದೇಶದ ಶಾಸಕರ ಅಧ್ಯಕ್ಷತೆಯಲ್ಲಿ ನೇಮಿಸುವ ಸಮಿತಿ ಅಥವಾ ಸರ್ಕಾರ ನಿಗದಿ ಪಡಿಸುವ ಅಧಿಕಾರಿ ಆ ಫಲಾನುಭವಿಗಳನ್ನು ಆಯ್ಕೆ ಮಾಡಬಹುದು." ಇದೊಂದು ಕೆಟ್ಟ ಅಧಿಕಾರ ದಾಹದ ತಿದ್ದುಪಡಿ, ಅಹಂಭಾವ ಅಧಿಕಾರ ದುರುಪಯೋಗದ ಪ್ರದರ್ಶನ. ಒಂದೇ ಹೊಡೆತಕ್ಕೆ ಶಾಸಕರು ಅಂತಿಮ ಮಧ್ಯಸ್ಥರಾಗಿ ಗ್ರಾಮ ಸಭೆಯ ತೀರ್ಮಾನವನ್ನು ತೆಗೆದು ಹಾಕಬಹುದು! ಇದೊಂದು ಅತೀ ಅಪಾಯಕಾರಿ ಬೆಳವಣಿಗೆ. ಪ್ರಜಾಪ್ರಭುತ್ವದ ಬುಡಕ್ಕೇ ಕೊಡಲಿ ಪೆಟ್ಟು ಹಾಕಿದಂತೆ! ಗ್ರಾಮ ಪಂಚಾಯತ್ ತನ್ನ ಕರ್ತವ್ಯ ನಿರ್ವಹಿಸಲು ವಿಫಲಗೊಂಡಿದೆ ಎಂದು ತೀರ್ಮಾನಿಸುವವರು ಯಾರು? ಸಮಿತಿಯನ್ನು ರಚಿಸುವವರು ಯಾರು? ವಸತಿ ಕಾರ್ಯಕ್ರಮವನ್ನೇ ಯಾಕೆ ವಿಶೇಷವಾಗಿ ಹೆಸರಿಸಲಾಗಿದೆ? ಸರ್ಕಾರದ ಎಲ್ಲಾ ಕಾರ್ಯಕ್ರಮಗಳ ಬಗೆಗಿನ ಗ್ರಾಮ ಸಭೆಯ ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳುವ ಈ ತಿದ್ದುಪಡಿಯ ಅಂತಿಮ ಪರಿಣಾಮವೇನು?
ಅತೀ ಮುಖ್ಯವೆನಿಸುವ, ಆದರೆ ಧಾವಂತದಲ್ಲಿ ಪಂಚಾಯತ್ ರಾಜ್ ಕಾಯಿದೆಗೆ ತಂದ ತಿದ್ದುಪಡಿ ಇದಾಗಿತ್ತು. ವಿಧಾನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಕಲಾಪ ಬಹಿಷ್ಕಾರದಿಂದ ತಿದ್ದುಪಡಿ ಸುಲಭವಾಗಿ ಅಂಗೀಕಾರಗೊಂಡರೆ, ವಿಧಾನ ಪರಿಷತ್ತಿನಲ್ಲಿ ಈ ವಿಷಯದ ಬಗ್ಗೆ ಮತಗಳು ಸಮಭಾಗವಾಗಿ ವಿಂಗಡಣೆಯಾದಾಗ, ಸಭಾಧ್ಯಕ್ಷರು ತಿದ್ದುಪಡಿಯ ಪರವಾಗಿ ಮತ ನೀಡಿದ್ದು ನಮ್ಮ ಪಂಚಾಯತ್ ರಾಜ್ ಇತಿಹಾಸದಲ್ಲೇ ಒಂದು ದೊಡ್ಡ ಕಪ್ಪು ಚುಕ್ಕೆ.
ಈ ತಿದ್ದುಪಡಿಯ ಕುರಿತಾಗಿ ಎಲ್ಲಿಯೂ ಚರ್ಚೆಗಳೇ ಆಗಿರಲಿಲ್ಲ. ರಾಜ್ಯ ಸರ್ಕಾರದ ಕಾನೂನು ಕಾರ್ಯದರ್ಶಿಗಳು ಇದಕ್ಕೆ ವಿರೋಧಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಅದನ್ನು ನಿರ್ಲಕ್ಷಿಸಲಾಗಿತ್ತು. ವಿಧಾನ ಸಭೆಯ ಯಾವುದೇ ವಿಷಯ ಸಮಿತಿ ಈ ತಿದ್ದುಪಡಿಯ ಪರಿಣಾಮದ ಬಗ್ಗೆ ಗಂಭೀರ ಚರ್ಚೆ ನಡೆಸಿರಲಿಲ್ಲ. ಪಂಚಾಯತ್ ರಾಜ್ ವಿಷಯದಲ್ಲಿ ಅನುಭವ ಇರುವ ತಜ್ಞರೊಡನೆಯಾಗಲೀ ಪರಿಣಿತರೊಂದಿಗಾಗಲೀ ಯಾವುದೇ ಸಮಾಲೋಚನೆಗಳು ನಡೆದಿರಲಿಲ್ಲ. ಸರ್ಕಾರ ಈ ತಿದ್ದುಪಡಿಯ ಬಗ್ಗೆ ಯಾವುದೇ ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸಿರಲಿಲ್ಲ. ಇದೆಲ್ಲಕ್ಕಿಂತ ದೊಡ್ಡ ದುರಂತವೆಂದರೆ ಗ್ರಾಮ ಪಂಚಾಯತಿಗಳ ಜೊತೆ ಈ ತಿದ್ದುಪಡಿಯ ವಿಷಯದ ಬಗ್ಗೆ ಸಂವಾದ ನಡೆಸುವುದಿರಲಿ, ಅವರಿಗೆ ವಿಷಯವನ್ನು ತಿಳಿಸುವ ಗೋಜಿಗೂ ಸರ್ಕಾರ ಹೋಗಿರಲಿಲ್ಲ. "ಈಗ ಗ್ರಾಮ ಪಂಚಾಯತಿಗಳು ಸರಿಯಾಗಿ ಕೆಲಸ ಮಾಡದೇ ನಿಜವಾಗಿ ನೆರವು ಬೇಕಾದ ಫಲಾನುಭವಿಗಳಿಗೆ ನೆರವು ದೊರಕುತ್ತಿಲ್ಲ. ಹಣ ಖರ್ಚಾಗದೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹಿಂದಿರುಗುತ್ತಿದೆ. ಅದಕ್ಕಾಗಿಯೇ ಈ ತಿದ್ದುಪಡಿಯನ್ನು ತರುತ್ತಿದ್ದೇವೆ" ಎಂದು ತಿದ್ದುಪಡಿ ಮಸೂದೆಯನ್ನು ಮಂಡಿಸುವಾಗ ಸರ್ಕಾರ ಹೇಳಿತು!
ಈ ವಿಷಯ ಪತ್ರಿಕೆಗಳಲ್ಲಿ ಸಹ ಹೆಚ್ಚಿನ ಪ್ರಾಮುಖ್ಯತೆ ಪಡೆಯದೆ, ಕಣ್ಣಾಡಿಸುವ ಸಾಮಾನ್ಯ ಸುದ್ದಿಯಾಗಿ ಪ್ರಕಟಗೊಂಡಿತು. ಆದರೆ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ (ದಿ ಸಿ.ಡಬ್ಲ್ಯೂ.ಸಿ.) ಸಂಸ್ಥೆಯು ಈ ಸುದ್ದಿಯನ್ನು ಗಮನಿಸಿ, ತಕ್ಷಣ ಮಾನ್ಯ ರಾಜ್ಯಪಾಲರಿಗೆ ಈ ಮಸೂದೆಗೆ ಅಂಕಿತ ಹಾಕದಂತೆ ಪತ್ರ ಬರೆಯಿತು. ಸರ್ಕಾರದ ಕಾರ್ಯಕ್ರಮಗಳಿಗೆ ಗ್ರಾಮ ಸಭೆಯಲ್ಲಿ ಜನರು ಫಲಾನುಭವಿಗಳನ್ನು ಆಯ್ಕೆ ಮಾಡುವುದು ಸಂವಿಧಾನಬದ್ಧ ಹಕ್ಕು. ಅದರ ಮೇಲೆ ನಿರ್ಭಂದ ಹೇರಲು ಯಾರಿಗೂ ಅಧಿಕಾರವಿಲ್ಲ. ನಮ್ಮ ದೇಶದ ಸಂವಿಧಾನ ನೀಡಿದ ಹಕ್ಕನ್ನು ಕಿತ್ತುಕೊಳ್ಳುವ ಈ ತಿದ್ದುಪಡಿಯನ್ನು ವಿರೋಧಿಸಿ ಪ್ರತಿಭಟಿಸಬೇಕು ಎನ್ನುವ ದಿ ಸಿ.ಡಬ್ಲ್ಯೂ.ಸಿ. ಸಂಸ್ಥೆಯ ಅಭಿಪ್ರಾಯಕ್ಕೆ ಹಲವು ಸಮಾನ ಮನಸ್ಕರು ಬೆಂಬಲ ವ್ಯಕ್ತಪಡಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಭಾರತದ ರಾಯಭಾರಿಯಾಗಿದ್ದ ಹಿರಿಯ ಗಾಂಧಿವಾದಿ ಶ್ರೀ ಎಲ್.ಸಿ.ಜೈನ್, ನಿವೃತ್ತ ಹಿರಿಯ ಸರ್ಕಾರಿ ಅಧಿಕಾರಿಗಳಾದ ಶ್ರೀ ಚಿರಂಜೀವಿ ಸಿಂಗ್ ಹಾಗೂ ಶ್ರೀ ಮೀನಾಕ್ಷಿ ಸುಂದರಂ ಅವರಂತಹ ಅನೇಕ ಹಿರಿಯರು ಈ ಅಭಿಪ್ರಾಯಗಳಿಗೆ ಪುಷ್ಟಿ ನೀಡಿ ಈ ಹೋರಾಟಕ್ಕೆ ಸಲಹೆಗಾರರಾಗಿ ಜೊತೆಯಾಗಿದ್ದು ಹೊಸ ಚೈತನ್ಯವನ್ನು ನೀಡಿತು.
ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಕಳಕಳಿ ಇರುವ, ಜನಭಾಗವಹಿಸುವಿಕೆಯ ಬಗ್ಗೆ ನಂಬಿಕೆಯಿಂದ ಕೆಲಸ ಮಾಡುತ್ತಿರುವ ಸಂಘ-ಸಂಸ್ಥೆಗಳು ಹಾಗೂ ವ್ಯಕ್ತಿಗಳು, ಗ್ರಾಮ ಸಭಾ ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಜೊತೆ ದಿ ಸಿ.ಡಬ್ಲ್ಯೂ.ಸಿ.ಸಂಸ್ಥೆಯು ಸಂಪರ್ಕಿಸಿ, ಈ ತಿದ್ದುಪಡಿಯ ಕುರಿತಾಗಿ ಜನಾಂದೋಲನ ರೂಪಿಸುವ ಬಗ್ಗೆ ಹಲವಾರು ಚರ್ಚೆಗಳನ್ನು ನಡೆಸಿತು. ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿನ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧ್ಯಕ್ಷರ ಜೊತೆ ಚರ್ಚೆ ನಡೆಸಿತು. ಅವರೆಲ್ಲರೂ ಈ ತಿದ್ದುಪಡಿಯ ಕುರಿತಾಗಿ ಸಹಿ ಸಂಗ್ರಹಣಾ ಚಳುವಳಿ ನಡೆಸಿ ಮಾನ್ಯ ರಾಜ್ಯಪಾಲರಿಗೆ ಕಳುಹಿಸಿದರು. ಅಲ್ಲದೇ ಗ್ರಾಮ ಪಂಚಾಯತಿಗಳ ಸಭೆಗಳಲ್ಲಿ ನಿರ್ಣಯಿಸಿ ಈ ತಿದ್ದುಪಡಿಗೆ ಸಹಿ ಹಾಕದಂತೆ ರಾಜ್ಯಪಾಲರಿಗೆ ಮನವಿ ಕಳುಹಿಸಲಾಯಿತು. ಮಹಿಳೆಯರ ಗುಂಪುಗಳಿಂದಲೂ ಸಹ ಈ ತಿದ್ದುಪಡಿಗೆ ಅಂಗಿಕಾರ ನೀಡದಂತೆ ನಿರ್ಣಯಿಸಿ ರಾಜ್ಯಪಾಲರಿಗೆ ಮನವಿ ಕಳುಹಿಸಲಾಯಿತು. ಈ ಚಳುವಳಿ ಸಂಘಟಿತವಾಗಿ ರೂಪುಗೊಳ್ಳಬೇಕು; ಗ್ರಾಮ ಸಭಾ ಹಾಗೂ ಗ್ರಾಮ ಪಂಚಾಯತ್ ಸದಸ್ಯರೆಲ್ಲರೂ ಒಗ್ಗೂಡಿ ತಮ್ಮ ಹಕ್ಕು ಮತ್ತು ಅಧಿಕಾರಕ್ಕಾಗಿ ಸಂಘಟಿತ ಹೋರಾಟ ನಡೆಸಿದರೆ ಅಂತಹ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ; ಹೀಗಾಗಿ ಅದಕ್ಕೊಂದು ವೇದಿಕೆ ರೂಪುಗೊಳ್ಳಬೇಕು ಎಂದು ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಚರ್ಚಿಸಿ ನಿರ್ಣಯಿಸಿದರು. ಅದರ ಫಲಶ್ರುತಿಯೇ "ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ". ಗ್ರಾಮ ಪಂಚಾಯತಿಗಳ ಹಕ್ಕು ಮತ್ತು ಅಧಿಕಾರಗಳನ್ನು ಸ್ಪಷ್ಟವಾಗಿ ಅರಿತುಕೊಳ್ಳಲು ಮತ್ತು ಅದರ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟ ನಡೆಸಲು ಗ್ರಾಮ ಸಭಾ ಹಾಗೂ ಗ್ರಾಮ ಪಂಚಾಯತ್ ಸದಸ್ಯರಿಂದ, ಸದಸ್ಯರಿಗಾಗಿ, ಸದಸ್ಯರಿಗೋಸ್ಕರ ರೂಪುಗೊಂಡಿರುವ ವೇದಿಕೆಯೇ ಈ "ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ".