ಅಂಗನವಾಡಿ ಆಹಾರ ಆಂದೋಲನ - 2011
ರಾಜ್ಯದಲ್ಲಿ ಸರ್ಕಾರವು ನೇಮಿಸಿದ ಗುತ್ತಿಗೆದಾರರಿಂದ ಪೂರೈಕೆಯಾಗುತ್ತಿರುವ ಅಂಗನವಾಡಿಗಳು ನೀಡುತ್ತಿರುವ ಪೊಟ್ಟಣ ಆಹಾರಗಳು ಅಪೌಷ್ಟಿಕವಾಗಿವೆ. ಹೀಗಾಗಿ ಅನೇಕ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿತು. ಈ ಆಹಾರದ ಪೊಟ್ಟಣವನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದಾಗ ಇದು ಅಪೌಷ್ಟಿಕವಾಗಿದೆ ಎಂಬುದು ತಿಳಿದು ಬಂದಿತು. ಅಲ್ಲದೇ ಸರ್ವೋಚ್ಛ ನ್ಯಾಯಾಲಯದ ಆದೇಶದ ಪ್ರಕಾರ, ಈ ಆಹಾರ ಪೂರೈಕೆಯ ವಿಧಾನವು ಐಸಿಡಿಎಸ್ ನಿರ್ಧರಿಸಿದ, ಸ್ವ-ಸಹಾಯ ಗುಂಪುಗಳಿಂದ ಸ್ಥಳೀಯವಾಗಿ ತಯಾರಿಸಿದ ಮಧ್ಯಾಹ್ನದ ಬಿಸಿ ಊಟ ನೀಡಬೇಕು ಎಂಬ ಆಶಯಕ್ಕೆ ತದ್ವಿರುದ್ಧವಾಗಿದೆ. ಅಲ್ಲದೇ ಅಂಗನವಾಡಿಯ ಕಾರ್ಯಕ್ರಮದ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್-ಗಳಿಗೆ ಹಸ್ತಾಂತರಿಸದೇ ಇರುವುದು ಭಾರತ ಸಂವಿಧಾನದ 73ನೇ ತಿದ್ದುಪಡಿಯ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆಯ ಉಲ್ಲಂಘನೆಯಾಗಿದೆ. ಇವೆಲ್ಲವನ್ನೂ ಗಮನಿಸಿ 2011ರಲ್ಲಿ ಅಂಗನವಾಡಿ ಆಹಾರ ಆಂದೋಲನವನ್ನು ನಡೆಸಲಾಯಿತು.