ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನಕ್ಕೆ ಸಂಬಂಧಿಸಿದಂತೆ ಆಯ್ದ ಪತ್ರಿಕಾ ವರದಿಗಳು (ಪತ್ರಿಕಾ ವರದಿಗಳಿಗಾಗಿ ಮುಂದಿರುವ ಆಯಾ ವರ್ಷದ ಮೇಲೆ ಕ್ಲಿಕ್ಕಿಸಿ) |
ಸ್ಥಳೀಯ ಸರ್ಕಾರ - ಗ್ರಾಮ ಪಂಚಾಯತಗಳಿಗೆ ಸಕಾಲದಲ್ಲಿ ಚುನಾವಣೆಯನ್ನು ನಡೆಸದೇ ಅದನ್ನುನ ಕೋರೋನಾ ಕಾರಣ ನೀಡಿ ಮುಂದೂಡಿದ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಕಾಲದಲ್ಲಿ ಚುನಾವಣೆ ನಡೆಸುವುದು ಅಥವಾ ಚುನಾವಣೆ ಮುಂದೂಡಿದ್ದಲ್ಲಿ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿಯ ಬದಲಿಗೆ ಈಗ ಇರುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸ್ಥಳೀಯ ಸರ್ಕಾರವನ್ನೇ ಸ್ಥಳೀಯಾಡಳಿತ ಸಮಿತಿಯಾಗಿ ಚುನಾವಣೆ ನಡೆಯುವವರೆಗೆ ಮುಂದುವರೆಸುವ ಬಗ್ಗೆ ನಡೆಯುತ್ತಿರುವ ವಿವಿಧ ರೀತಿಯಲ್ಲಿ ಹಕ್ಕೊತ್ತಾಯ, ಹೋರಾಟಗಳ ಕುರಿತ ಪತ್ರಿಕಾ ವರದಿಗಳು.
|
2016 ರಲ್ಲಿ ಜಾರಿಗೆ ಬಂದ ಉತ್ತಮವಾದ ಕಾಯ್ದೆಯಾದ ಗ್ರಾಮ ಸ್ವರಾಜ್ ಕಾಯ್ದೆಯ ಅಂಶಗಳಿಗೆ ತಿದ್ದುಪಡಿ ತರುವ ಮೂಲಕ ಪ್ರಜಾತಂತ್ರಕ್ಕೆ ಪೆಟ್ಟು ಕೊಡಲು ಸಿದ್ಧವಾದ ಕರ್ನಾಟಕ ಸರ್ಕಾರದ ನಿರ್ಧಾರ ಮತ್ತು ವಸತಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಗ್ರಾಮ ಸಭೆಯ ಅಧಿಕಾರಕ್ಕೆ ಕತ್ತರಿ ಹಾಕುವ ಸರ್ಕಾರದ ನಿರ್ಧಾರವನ್ನು ಆಂದೋಲನವು ಖಂಡಿಸಿ ಅದರ ವಿರುದ್ಧ ನಿರಂತರವಾದ ಹೋರಾಟವನ್ನು ಕೈಗೊಂಡಿತು. 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತದಾರರಿಗೆ ಮತದಾನ ಮತ್ತು ಚುನಾವಣೆಯ ಮಹತ್ವದ ಬಗ್ಗೆ ಜಾಗ್ರತಿ ಮೂಡಿಸಲು 'ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ' ಅಭಿಯಾನ ನಡೆಸಿದ್ದು ಅದರ ಪತ್ರಿಕಾ ವರದಿಗಳೂ ಇಲ್ಲಿವೆ.
|
ದೇಶದಾದ್ಯಂತ ತ್ರಿಸ್ಥರ ಪಂಚಾಯತ್ ರಾಜ್ ವ್ಯವಸ್ಥೆಗೆ ಸುಭದ್ರ ತಳಪಾಯವನ್ನು ಹಾಕಿಕೊಟ್ಟ 73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಗೆ ಈಗ 25ರ ಸಂಭ್ರಮ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ, ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಸಹಭಾಗಿತ್ವದಲ್ಲಿ 2018ನೇ ಫೆಬ್ರುವರಿ 23 ಮತ್ತು 24 ರಂದು ಉಡುಪಿಯಲ್ಲಿ ಹಮ್ಮಿಕೊಂಡಿದ್ದ 'ಗ್ರಾಮ ಸ್ವರಾಜ್ ಚಿಂತನ ಮಂಥನ' ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ.
|
ಮಕ್ಕಳ ಮತ್ತು ಮಹಿಳಾ ರಕ್ಷಣೆಯ ಕುರಿತು ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇದರಲ್ಲಿ ಮಕ್ಕಳು ಹಾಗೂ ಮಹಿಳೆಯರಿಗೆ ಇರುವ ಸಮಸ್ಯೆಗಳನ್ನು ಸ್ಥಳೀಯ ಸರ್ಕಾರದ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಎದುರು ಮಂಡಿಸಿ ಅವುಗಳಿಗೆ ಪರಿಹಾರ ಕ್ರಮಗಳನ್ನು ಹಾಗೂ ಅದಕ್ಕೆ ಸೂಕ್ತವಾದ ವಿವಿಧ ವ್ಯವಸ್ಥೆಗಳ ರಚನೆಯನ್ನು ಮಾಡಲು ಒತ್ತಾಯಿಸಲಾಯಿತು.
|
ಶ್ರೀ ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ಪಂಚಾಯತ್ ರಾಜ್ ಪರಿಣಿತರನ್ನೊಳಗೊಂಡ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ಸಮಿತಿಯು ಪ್ರಸ್ತುತ ಇರುವ 1993ರ ಕಾಯಿದೆಯನ್ನು ಕೂಲಂಕುಷವಾಗಿ ಅಭ್ಯಸಿಸಿ, ವಿಶ್ಲೇಷಿಸಿ, ಆಮೂಲಾಗ್ರ ಬದಲಾವಣೆಯ ಶಿಫಾರಸ್ಸುಗಳನ್ನೊಳಗೊಂಡ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ನೀಡಿದೆ. ಈ ವರದಿಯಲ್ಲಿ ಪ್ರಸ್ಥಾಪಿಸಿದ, ಮಸೂದೆಯು ಒಳಗೊಂಡ ಪ್ರಮುಖ ಅಂಶಗಳನ್ನು ಚರ್ಚಿಸಲು ಉಡುಪಿ ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರೊಡನೆ ದಿನಾಂಕ 07-03-2015ರಂದು ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಗಹನವಾದ ಚರ್ಚೆಯ ನಂತರ ಮಹಾತ್ಮಾ ಗಾಂಧಿಯವರ ಕನಸಿನ ಗ್ರಾಮ ಸ್ವರಾಜ್ಯದ ಕಲ್ಪನೆಯ ಆಶಯಗಳನ್ನು ಎತ್ತಿಹಿಡಿಯುವ ಈ ವರದಿಯ ಶಿಫಾರಸ್ಸುಗಳನ್ನು ಮತ್ತು ಮಸೂದೆಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು.
|
ಇಂದಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಹಣದಿಂದ ಕೊಳ್ಳಬಹುದು; ಎಲ್ಲವೂ ಮಾರಾಟಕ್ಕಿದೆ; ಎಲ್ಲವೂ ಮಾರಾಟಗೊಳ್ಳುವುದಕ್ಕೋಸ್ಕರವಾಗಿಯೇ ಇದೆ ಎನ್ನುವಂತಹ ವಾತಾವರಣ ಸೃಷ್ಟಿಗೊಂಡಿದೆ. ಅದನ್ನು ಕೊಳ್ಳಲು ಶತಾಯಗತಾಯವಾಗಿಯಾದರೂ, ಅನೈತಿಕವಾಗಿಯಾದರೂ ಹಣಗಳಿಸು ಎನ್ನುವಂತಹ ಕೆಟ್ಟ ಕೊಳಕು ಉತ್ಸಾಹ ಕಂಡುಬರುತ್ತಿದೆ. ಈಗ ಬಂದಿರುವ ಲೋಕಸಭಾ ಚುನಾವಣೆ ಈ ಎಲ್ಲಾ ಚಟುವಟಿಕೆಗಳ ರಂಗಸಜ್ಜಿಕೆಯಾಗಿ ನಿಂತಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗೂಡಿ ಮತದಾನದ ಪಾವಿತ್ರ್ಯತೆಯನ್ನು ಎತ್ತಿಹಿಡಿಯುವ ದೃಢ ಸಂಕಲ್ಪದಿಂದ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಸ್ವಾಭಿಮಾನಿ ಮತದಾರರ ಆಂದೋಲನವನ್ನು ಪ್ರಾರಂಭಿಸಿದೆ. ಪ್ರಜಾಪ್ರಭುತ್ವದ ಪವಿತ್ರ ಜಾತ್ರೆಯಾಗಿರುವ ಈ ಚುನಾವಣೆ ಓಟು ಕೊಳ್ಳುವ ಮಾರುಕಟ್ಟೆ, ಜನರು ತಮ್ಮನ್ನು ತಾವು ಹರಾಜು ಹಾಕುವ ತಾಣ ಎಂಬಂತೆ ವರ್ತಿಸುವ ರಾಜಕೀಯ ಪಕ್ಷಗಳಿಗೆ, ಸ್ವಾಭಿಮಾನಿ ಮತದಾರರಾದ ನಾವು ದೇಶದ ಭವಿಷ್ಯಕ್ಕೆ ಅರ್ಥಪೂರ್ಣ ದಾರಿ ತೋರಿಸುವ ಛಾತಿ ನಮಗಿದೆ ಎಂದು ತೋರಿಸುವ ಸಂದರ್ಭ ಇದಾಗಿದೆ.
|
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ನ್ಯಾಯ ಮತ್ತು ಪ್ರಜಾಪ್ರಭುತ್ವದ ಆಚರಣೆಯನ್ನು ಸ್ವಚ್ಛಗೊಳಿಸವಲ್ಲಿ ಪ್ರಜಾತಂತ್ರ ನೆಲೆಯಲ್ಲಿ ಚೊಕ್ಕ ಚುನಾವಣೆ ನಡೆಸುವ ಸಲುವಾಗಿ ಸಮಾನ ಮನಸ್ಕರು ಹಾಗೂ ಸಂಸ್ಥೆಗಳೊಂದಿಗೆ ಕೈಜೋಡಿಸಿದೆ. ಇವರೆಲ್ಲರ ಸಹಭಾಗಿತ್ವದಲ್ಲಿ 'ಚೊಕ್ಕ ಚುನಾವಣಾ ಅಭಿಯಾನ' ರೂಪುಗೊಂಡಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತವಾದ, ನ್ಯಾಯಯುತವಾದ, ಪ್ರಜಾಪ್ರಭುತ್ವದ ನಿಜ ಅರ್ಥದಲ್ಲಿ ಚುನಾವಣೆಗಳು ನಡೆಯುವುದು ಪ್ರಜೆಗಳು ಹಕ್ಕು ಎನ್ನುವ ವಿಚಾರಕ್ಕೆ ಚೊಕ್ಕ ಚುನಾವಣಾ ಅಭಿಯಾನ ಬದ್ಧವಾಗಿದೆ. ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಎತ್ತಿಹಿಡಿಯುವ ಸಲುವಾಗಿ, ನ್ಯಾಯ ಮತ್ತು ಪ್ರಜಾಪ್ರಭುತ್ವದ ಆಚರಣೆಯನ್ನು ಸ್ವಚ್ಛಗೊಳಿಸವಲ್ಲಿ ಸಂವಿಧಾನ ಬದ್ಧವಾದ ನಮ್ಮ ಹಕ್ಕನ್ನು ಪುನಃ ದೃಢಪಡಿಸಲು ಅನೇಕ ಸಂಘ-ಸಂಸ್ಥೆಗಳು, ವ್ಯಕ್ತಿಗಳು ಈ ಅಭಿಯಾನದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
|
ಡಿಸೆಂಬರ್ 2011ರಲ್ಲಿ ಗ್ರಾಮ ಸ್ವಾರಾಜ್ ಸಮಾವೇಶ ನಡೆಸಿ ಗ್ರಾಮ ಪಂಚಾಯತ್-ಗಳಿಗೆ ಸಂಬಂಧಿಸಿದಂತೆ ಉಡುಪಿ ನಿರ್ಣಯಗಳು 2011ನ್ನು ಸರ್ಕಾರದ ಮುಂದೆ ಮಂಡಿಸಿ, ಅವುಗಳ ಜಾರಿಗಾಗಿ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಸರ್ಕಾರವು ಯಾವುದೇ ರೀತಿಯಲ್ಲಿ ಸ್ಪಂದಿಸದೇ ಇರುವ ಕಾರಣ ಜುಲೈ 18ನೇ 2012ರಂದು ಬೆಂಗಳೂರಿನ ಫ್ರೀಡಂ ಪಾರ್ಕ್-ನಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಉಡುಪಿ ನಿರ್ಣಯಗಳ ಹಾಗೂ ಮೂರನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಜಾರಿಗಾಗಿ ಒತ್ತಾಯಿಸಿ ಬೃಹತ್ ಹಕ್ಕೊತ್ತಾಯ ಸಭೆಯನ್ನು ಹಮ್ಮಿಕೊಂಡಿತು.
|
ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಹಾಗೂ ಗ್ರಾಮ ಸಭಾ ಸದಸ್ಯರು ಒಂದೆಡೆ ಸೇರಿ, ಗ್ರಾಮ ಪಂಚಾಯತ್-ಗಳನ್ನು ಸುಲಲಿತವಾಗಿ ಮುನ್ನಡೆಸಲು ಎದುರಾಗುತ್ತಿರುವ ಅಡೆತಡೆಗಳನ್ನು ಕೂಲಂಕುಶವಾಗಿ ಚರ್ಚಿಸಿ, ಅವುಗಳಿಗೆ ಪರಿಹಾರೋಪಾಯಗಳನ್ನು ಗುರುತಿಸಿಕೊಳ್ಳಲು ಹಾಗೂ ಈ ಪರಿಹಾರಗಳನ್ನು ರಾಜ್ಯ ಸರ್ಕಾರದ ಮುಂದೆ ಮಂಡಿಸಿ, ಅವುಗಳ ಜಾರಿಯ ಬಗ್ಗೆ ಸರ್ಕಾರದ ಬದ್ಧತೆಯನ್ನು ಪಡೆದುಕೊಳ್ಳಲು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು 2011ನೇ ಡಿಸೆಂಬರ್ 9, 10 ಹಾಗೂ 11ರಂದು ರಾಜ್ಯ ಮಟ್ಟದ ಗ್ರಾಮ ಸ್ವರಾಜ್ ಸಮಾವೇಶ 2011ನ್ನು ಉಡುಪಿಯಲ್ಲಿ ನಡೆಸಿತು.
|
ಚುನಾವಣಾ ಸಮಯದಲ್ಲಿ ಮತದಾರರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತೋರಿಸಬಹುದಾದ ಯಾವುದೇ ಆಮಿಷಗಳಿಗೆ ಒಳಪಟ್ಟು ತಮ್ಮನ್ನು ಮತ್ತು ತಮ್ಮ ಮತಗಳನ್ನು ಮಾರಿಕೊಳ್ಳಬಾರದು ಎಂದು ಜಾಗೃತಿ ಮೂಡಿಸಲು ಮೊಟ್ಟ ಮೊದಲ ಬಾರಿಗೆ ಗ್ರಾಮ ಪಂಚಾಯತ್ ಚುನಾವಣೆ 2010ರಲ್ಲಿ ರಾಜ್ಯದಾದ್ಯಂತ "ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ" ಅಭಿಯಾನವನ್ನು ಪ್ರಾರಂಭಿಸಲಾಯಿತು. ನಂತರ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣಾ ಸಂದರ್ಭದಲ್ಲೂ ಈ ಅಭಿಯಾನವನ್ನು ಮುಂದುವರಿಸಲಾಯಿತು.
ಅಲ್ಲದೇ 2010ರಲ್ಲಿ ಸರ್ಕಾರ ಹೊರಡಿಸಿದ "ಹಣಕಾಸಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಪಂಚಾಯತ್ ಅಧ್ಯಕ್ಷರ ಅಧಿಕಾರ ಹಿಂಪಡೆದು ಸರ್ಕಾರ ಸೂಚಿಸುವ ಅಧಿಕಾರಿ ಅಥವಾ ಪ್ರಾಧಿಕಾರಕ್ಕೆ ಆ ಅಧಿಕಾರ" ನೀಡಬೇಕೆಂಬ ಸರ್ಕಾರಿ ಆದೇಶದ ವಿರುದ್ಧ ಹೋರಾಟ ನಡೆಸಲಾಯಿತು. |
ಮೂರನೇ ಹಣಕಾಸು ಆಯೋಗವು ತನ್ನ ವರದಿಯಲ್ಲಿ ಗ್ರಾಮ ಪಂಚಾಯತ್-ಗಳನ್ನು ಬಲಪಡಿಸುವ ಹಲವಾರು ಶಿಫಾರಸ್ಸುಗಳನ್ನು ಮಾಡಿ ಸರ್ಕಾರದ ಮುಂದೆ ಮಂಡಿಸಿತು. 2009ರಲ್ಲಿ ಈ ಶಿಫಾರಸ್ಸುಗಳನ್ನು ಅನುಷ್ಠಾನಕ್ಕಾಗಿ ಸರ್ಕಾರವನ್ನು ಒತ್ತಾಯಿಸಲಾಯಿತು.
|
ಜುಲೈ 2007ರಲ್ಲಿ ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕದ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು. ಈ ತಿದ್ದುಪಡಿ ವಿಧೇಯಕ ಹಾಗೂ ಸಮಾವೇಶಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳು ಇಲ್ಲಿವೆ.
|